ಧಾರ್ಮಿಕ ಬೋಧನೆಗಳಿಗೆ ಸ್ಪೂರ್ತಿ ಸಮಸ್ತ
  ಇಪ್ಪತ್ತನೇ ಶತಮಾನದ ಮೊದಲಾರ್ಧದಲ್ಲಿ ಇಂದಿನ ಕೇರಳ ಮತ್ತು ಕರ್ನಾಟಕವನ್ನು ಒಳಗೊಂಡ ಅಂದಿನ ಮಲಬಾರ್ ಪ್ರಾಂತ್ಯದಲ್ಲಿ ಮುಸ್ಲಿಂ ಸಮುದಾಯ ಅರಾಜಕತೆ ಮತ್ತು ಅಭದ್ರತೆಯಿಂದ ಬಾಳಿದ್ದ ಕಾಲವೊಂದಿತ್ತು. 1921 ರಲ್ಲಿ ಬ್ರಿಟಿಷರ ವಿರುದ್ಧ ಮಲಬಾರ್ ಪ್ರಾಂತ್ಯದಲ್ಲಿ ನಡೆದ ಮಲಬಾರ್ ಕಲಹ ಅದಕ್ಕೆ ಮುಖ್ಯ ಕಾರಣವಾಗಿತ್ತು . ಆಳುತ್ತಿದ್ದ ಬ್ರಿಟಿಷರ ದೌರ್ಜನ್ಯದ ಜೊತೆಗೆ ಬಡತನ ಮತ್ತು ಹಸಿವು ಅವರನ್ನು ಇನ್ನಷ್ಟು ದುರ್ಬಲರನ್ನಾಗಿಸಿತ್ತು . ಆ ಜನತೆಯ ಶೈಕ್ಷಣಿಕ ಮತ್ತು ಆರ್ಥಿಕ ಪರಿಸ್ಥಿತಿ ಈ ಎಲ್ಲಾ ಕಾರಣಗಳಿಂದ ಹದಗೆಟ್ಟು ಹೋಗಿತ್ತು . ಈ ಅಸಹಾಯಕ ಪರಿಸ್ಥಿತಿಯನ್ನು ದುರುಪಯೋಗಪಡಿಸಲು ಕೆಲ ನೂತನವಾದಿಗಳು ರಂಗಕ್ಕಿಳಿದರು . ಪಾರಂಪರಿಕ ಇಸ್ಲಾಮಿನ ಆಶಯ ಆದರ್ಶಗಳನ್ನು ಧಿಕ್ಕರಿಸಿ ಧರ್ಮದ ಆಧುನೀಕರಣವೆಂಬ ಸೋಗಿನಲ್ಲಿ ಇವರು ನವ ನವೀನ ವಾದಗಳನ್ನು ಬಿತ್ತರಿಸಿ ಮುಗ್ಧ ಮುಸ್ಲಿಂ ಸಮುದಾಯವನ್ನು ದಾರಿ ತಪ್ಪಿಸಲಾರಂಬಿಸಿದರು . ಅದುವರೆಗೆ ಯಾವುದೇ ಭಿನ್ನ ಅಭಿಪ್ರಾಯಗಳಿಲ್ಲದೆ ಸೂಫಿ ಸರಣಿಯಲ್ಲಿ ಸಾಗಿ ಬಂದಿದ್ದ ಸಮುದಾಯದ ವಿಶ್ವಾಸಧಾರೆಯನ್ನು ವಕ್ರವಾಗಿ ಚಿತ್ರೀಕರಿಸಿ ಸಾತ್ವಿಕರಾದ ಪೂರ್ವಿಕರನ್ನು ಶಿರ್ಕ್ ಆರೋಪಗಳಿಂದ ಹಂಗಿಸಿ ತಮ್ಮ ವಿಷವಾದಗಳನ್ನು ಇವರು ಸಂಘಟಿತ ರೂಪದಲ್ಲಿ ವ್ಯಾಪಕವಾಗಿ ಹರಡತೊಡಗಿದಾಗ ಇದನ್ನು ತಡೆಗಟ್ಟಿ ಸಮುದಾಯದ ಸಾಂಪ್ರದಾಯಿಕ ನೈಜ ವಿಶ್ವಾಸಧಾರೆಯಾದ ಅಹ್ಲುಸ್ಸುನ್ನತಿ ವಲ್ ಜಮಾಅತನ್ನು ಸಂರಕ್ಷಿಸಲು ಸ್ಥಾಪಿತಗೊಂಡ ವಿದ್ವಾಂಸರ ಒಕ್ಕೂಟವಾಗಿದೆ ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ.

  ಮುಸ್ಲಿಂ ಉಮ್ಮತ್ತಿನ ಈಮಾನಿಗೆ ಕಾವಲು ನಿಲ್ಲಲು  ಸಾಧ್ಯವಾಯಿತು ಎಂಬುದು ಈ ಶತಮಾನದ ಅವಧಿಯಲ್ಲಿ ಸಮಸ್ತ ಸಾಧಿಸಿದ ಅತಿ ದೊಡ್ಡ ಸಾಧನೆಯಾಗಿದೆ . ನೂತನವಾದದ ವಿವಿಧ ಕವಲುಗಳು ವಿವಿಧ ರೂಪದಲ್ಲಿ ಪ್ರತ್ಯಕ್ಷಗೊಂಡಾಗ ಅವರ ನ್ಯೂನ್ಯತೆಗಳನ್ನು ಸಮುದಾಯದ ಮುಂದೆ ಆಧಾರ ಸಹಿತ ತೆರೆದಿಡಲು ಮತ್ತು ನಕಲಿ ತ್ವರೀಖತ್‌ಗಳು ಸೇರಿದಂತೆ ಮುಗ್ಧ ಮುಸ್ಲಿಮರನ್ನು ಕಬಳಿಸಲು ಯತ್ನಿಸಿದ ಅದೆಷ್ಟೋ ವಂಚಕರನ್ನು ಹೆಡೆಮುರಿ ಕಟ್ಟಲು ಈ ಕಾಲಾವಧಿಯಲ್ಲಿ ಸಮಸ್ತಕ್ಕೆ ಸಾಧ್ಯವಾಯಿತು. ಖಾದಿಯಾನಿಸಂ ಮತ್ತು ಚೇಗನ್ನೂರಿಸಂ ಅಧಃಪತನದ  ಕಡೆಗೆ ವಾಲಿದ ಕಥನಗಳನ್ನು ಮನನ ಮಾಡಿದರೆ ಈ ಅಂಶಗಳು ರುಜುವಾತುಗೊಳ್ಳಬಹುದು.  

  ವಿವಿಧ ಧರ್ಮಗಳು ಮತ್ತು ವೈವಿಧ್ಯಮಯ ಸಂಸ್ಕೃತಿಯುಳ್ಳ ಸಮಾಜದಲ್ಲಿ ನೈಜ ಮುಸಲ್ಮಾನನಾಗಿ ಹೇಗೆ ಬದುಕಬಹುದು ಎಂಬುದನ್ನು ಪ್ರಾಯೋಗಿಕವಾಗಿ ಮುಸ್ಲಿಂ ಸಮಾಜಕ್ಕೆ ತಿಳಿಸಿಕೊಡಲು ಈ ಉಲಮಾ ಸಂಘಟನೆಗೆ ಸಾಧ್ಯವಾಯಿತೆಂಬುದು ಮತ್ತೊಂದು ಮುಖ್ಯ ಕೊಡುಗೆಯಾಗಿದೆ. ಇಸ್ಲಾಮಿನ ಏಕದೈವ ವಿಶ್ವಾಸದ ತಳಹದಿಯಲ್ಲಿ ದೃಢವಾಗಿ ನಿಂತುಕೊಂಡು ಇತರ ಧರ್ಮೀಯರ ಧಾರ್ಮಿಕ ನಂಬಿಕೆಗಳನ್ನು ಗೌರವಿಸುವ ಸೌಹಾರ್ದಯುತ ಸಂಸ್ಕೃತಿಯನ್ನು ಈ ನಾಡಿನಲ್ಲಿ ಸಮಸ್ತ ಕಟ್ಟಿ ಬೆಳೆಸಿತು .

ಧಾರ್ಮಿಕ ಶಿಕ್ಷಣ ರಂಗ :
  ' ಪವಿತ್ರ ಇಸ್ಲಾಮಿನ ನಂಬಿಕೆ ಮತ್ತು ಆಚರಣೆಗಳನ್ನು ಅಹ್ಲುಸ್ಸುನ್ನತಿ ವಲ್ ಜಮಾಅತಿನ ನೈಜ ರೀತಿಯಲ್ಲಿ ಪ್ರಬೋಧನೆ ಮತ್ತು ಪ್ರಚಾರ ನಡೆಸುವುದು ' 'ಧಾರ್ಮಿಕ ಜ್ಞಾನವನ್ನು ಪ್ರಚುರಪಡಿಸಿ ಪ್ರೋತ್ಸಾಹಿಸುವುದರ ಜೊತೆಗೆ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ಬೌತಿಕ ಶಿಕ್ಷಣದ ಕಲಿಕೆಗೆ ಅಗತ್ಯವಿರುವ ಪ್ರೋತ್ಸಾಹ ನೀಡುವುದು ' ಇವೆರಡು ಸಮಸ್ತದ ಸಂವಿಧಾನದಲ್ಲಿ ಉಲ್ಲೇಖಿಸಲಾದ ಒಂದನೇ ಮತ್ತು ನಾಲ್ಕನೇ ಗುರಿಗಳಾಗಿವೆ. ಸ್ಥಾಪಿತಗೊಂಡು ಸರಿಸುಮಾರು 25 ವರ್ಷಗಳ ಕಾಲ ನಿರಂತರವಾಗಿ ವಿವಿಧಡೆಗಳಲ್ಲಿ ಸಮಾವೇಶಗಳನ್ನು ನಡೆಸಿ ನೂತನವಾದಿಗಳ ವಿಕಲವಾದಗಳನ್ನು ಪ್ರತಿರೋಧಿಸುವುದಕ್ಕಾಗಿ ಸಂಘಟನೆಯ ಹೆಚ್ಚಿನ ಕಾರ್ಯಚಟುವಟಿಕೆಗಳನ್ನು ಮೀಸಲಿರಿಸಿದ್ದ  ಸಮಸ್ತ , ತದನಂತರ ಪ್ರಭೋದನೆಯ ಶೈಲಿಯಲ್ಲಿ ಬದಲಾವಣೆಯ ಕುರಿತು ಆಳವಾಗಿ ಚಿಂತಿಸಿ ದೀನೀ ಶೈಕ್ಷಣಿಕ ರಂಗವನ್ನು ವ್ಯವಸ್ಥಿತಗೊಳಿಸುವ ಯೋಜನೆಗಳನ್ನು ಜಾರಿಗೆ ತಂದಿತು . 1945 ಮೇ 27ರಂದು ಮಲಪ್ಪುರಂ ಜಿಲ್ಲೆಯ ಪೆರಿಂದಲ್ಮಣ್ಣ ಕಾರ್ಯವಟ್ಟಂ ಎಂಬಲ್ಲಿ ನಡೆದ ಸಮಸ್ತದ ಹದಿನಾರನೇ ಸಮ್ಮೇಳನದಲ್ಲಿ ಪ್ರಾಥಮಿಕ ಮದ್ರಸಾಗಳನ್ನು ಏಕೀಕೃತಗೊಳಿಸುವ ಕುರಿತು ವಿಸ್ತೃತ ಚರ್ಚೆಗಳು ನಡೆದವು . ಅದುವರೆಗೆ ಆ ಕಾಲದಲ್ಲಿ ಸರ್ಕಾರಿ ಶಾಲೆಗಳನ್ನು ಕೇಂದ್ರೀಕರಿಸಿ ಬಹುತೇಕ ಮದ್ರಸಾಗಳು ( ಓತುಪಳ್ಳಿಗಳು) ಕಾರ್ಯಚರಿಸುತ್ತಿದ್ದವು . ಭಾರತ ಬ್ರಿಟಿಷರಿಂದ ಸ್ವತಂತ್ರಗೊಂಡರೆ ಪ್ರಜಾಪ್ರಭುತ್ವ ಜಾತ್ಯತೀತ ರಾಷ್ಟ್ರವಾಗಿ ರೂಪುಗೊಳ್ಳುವುದರಿಂದ ಸರಕಾರಿ ಸ್ವಾಮ್ಯದ ಶಾಲೆಗಳಲ್ಲಿ ಒಂದು ಧರ್ಮಕ್ಕೆ ಸೀಮಿತವಾದ ಜ್ಞಾನಾರ್ಜನೆ ಸಾಧ್ಯವಾಗದು ಎಂದು ಸಯ್ಯಿದ್ ಅಬ್ದುರ್ರಹ್ಮಾನ್ ಬಾಫಖಿ ತಂಙಳ್ (ನ.ಮ) ಪ್ರಸ್ತುತ ಸಮ್ಮೇಳನದಲ್ಲಿ ಒತ್ತಿ ಹೇಳಿದರು . ಆದ್ದರಿಂದ ಧಾರ್ಮಿಕ ಜ್ಞಾನ ಕಲಿಕೆಗೆ ಪ್ರತ್ಯೇಕವಾದ ಒಂದು ಯೋಜನೆಯನ್ನು ರೂಪಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿಗೆ ಸಮುದಾಯ ತಲುಪಿತು. ಒಂದರಿಂದ ಹತ್ತನೇ ತರಗತಿವರೆಗಿನ ಪ್ರತ್ಯೇಕ ಕ್ಯರಿಕುಲಂ ಸಿದ್ಧಪಡಿಸಬೇಕೆಂದೂ ಬಾಫಖಿ ತಂಙಳ್ ನಿರ್ದೇಶಿಸಿದರು . ಅದರಂತೆ 1951 ಮಾರ್ಚ್ 23 24 25 ದಿನಾಂಕಗಳಲ್ಲಿ ವಡಗರ ಎಂಬಲ್ಲಿ ನಡೆದ ಸಮಸ್ತದ ಹತ್ತೊಂಬತ್ತನೇ ಸಮ್ಮೇಳನದ ಭಾಗವಾಗಿ ಮಾರ್ಚ್ 24 ರಂದು ನಡೆದ ಮುಶಾವರ ಸಭೆಯಲ್ಲಿ ಪ್ರತ್ಯೇಕ ವಿದ್ಯಾಭ್ಯಾಸ ಬೋರ್ಡ್ ರೂಪಿಸುವುದರ ಕುರಿತು ಆಳವಾಗಿ ಚರ್ಚೆ ನಡೆಯಿತು. ಚರ್ವಿತ ಚರ್ವಣ ಚರ್ಚೆಗಳ ಫಲವಾಗಿ ಪರವಣ್ಣ ಕೆ.ಪಿ. ಮುಹಿಯುದ್ದೀನ್ ಕುಟ್ಟಿ ಮುಸ್ಲಿಯಾರ್ ಅವರನ್ನು ಚೇರ್ಮನ್ ಆಗಿ ನಿಯುಕ್ತಗೊಳಿಸಿದ  ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಎಂಬ ನೂತನ ಸಮಿತಿಯನ್ನು ಜಾರಿಗೆ ತರಲಾಯಿತು. ಆ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಈ ನಿರ್ಣಯವನ್ನು ಘೋಷಿಸಿದಾಗ ಜನರು ಹರ್ಷೋದ್ಗಾರದಿಂದ ಅಂಗೀಕರಿಸಿದರು.
ಆ ಸಮ್ಮೇಳನದ ಆರು ತಿಂಗಳ ಬಳಿಕ 1951 ಸೆಪ್ಟೆಂಬರ್ 7 ರಂದು ಕೋಟ್ಟಕ್ಕಲ್ ಸಮೀಪದ ವಾಳಕ್ಕುಳಂ ಪುದುಪ್ಪರಂಬ್ ಜುಮಾ ಮಸೀದಿಯಲ್ಲಿ ಸಮಸ್ತದ ಪ್ರತಿನಿಧಿ ಸಮಾವೇಶವೊಂದು ನಡೆಯಿತು. ಆ ಸಮಾವೇಶದಲ್ಲಿ ಈ ಕೆಳಗಿನ ಅಂಶಗಳನ್ನು ನಿರ್ಣಯಿಸಲಾಯಿತು.
1. ದರ್ಸ್ ಮತ್ತು ಮದ್ರಸಾಗಳನ್ನು ಅಭಿವೃದ್ಧಿಪಡಿಸಿ , ಇಲ್ಲದ ಸ್ಥಳಗಳಲ್ಲಿ ಮದ್ರಸಾಗಳನ್ನು ಸ್ಥಾಪಿಸುವುದು.  
2. ಸಂಸ್ಥೆಗಳನ್ನು ಏಕೀಕರಣಗೊಳಿಸುವುದು .
3. ಅಗತ್ಯವಿರುವ ಸಿಲಬಸ್ ಮತ್ತು ಪಠ್ಯಪುಸ್ತಕಗಳನ್ನು ಸಿದ್ಧಪಡಿಸುವುದು .
4. ಅಧ್ಯಾಪಕರಿಗೆ ಟ್ರೈನಿಂಗ್ ಕ್ಲಾಸ್ ಪ್ರಾರಂಭಿಸುವುದು.
5. ಮದ್ರಸಾಗಳಿಗೆ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ನ ಅಂಗೀಕಾರ ನೀಡುವುದು , ಪರೀಕ್ಷಾ ಪದ್ಧತಿ ರೂಪೀಕರಿಸುವುದು ಮತ್ತು ಮದ್ರಸಾಗಳಿಗೆ ಪರಿಶೀಲನಾ ಭೇಟಿ  ನೀಡುವುದು.
 
  ಈ ಸಮ್ಮೇಳನದಲ್ಲಿ ಮೌಲಾನಾ ಅಬ್ದುಲ್ ಬಾರಿ ಮುಸ್ಲಿಯಾರ್ ವಾಳಕ್ಕುಳಂ 25 ರೂ , ಅವರ ಸಹೋದರ ಪುದುಪ್ಪರಂಬಿನ ಕೋಝಿಕ್ಕೋಡನ್ ಕುಞ್ಞಹ್ಮದ್ ಹಾಜಿ 5 ರೂ ಹಾಗೂ ಉಳಿದ ಹದಿನೇಳು ಮಂದಿ ಸದಸ್ಯರು ತಲಾ ಒಂದು ರೂಪಾಯಿಯಂತೆ ಸಂಭಾವನೆ ನೀಡಿ ಸಂಗ್ರಹಗೊಂಡ ಸಂಭಾವನೆಯಾದ 47 ರೂಪಾಯಿಯಾಗಿತ್ತು ಸಮಸ್ತ ಇಸ್ಲಾಮಿಕ್ ಮತ ವಿದ್ಯಾಭ್ಯಾಸ ಬೋರ್ಡ್‌ನ ಮೊದಲ ಬಂಡವಾಳ. ಹೀಗೆ ಆರಂಭಗೊಂಡ ಮದ್ರಸಾ ಪದ್ಧತಿಯು ಇಂದು ಹನ್ನೊಂದು ಸಾವಿರದಷ್ಟು ಮದ್ರಸಾಗಳಾಗಿ ಬೆಳೆದು ನಿಂತಿದೆ. ಇದರದೇ ಭಾಗವಾಗಿ ಇಂದು ಪೆರಿಂದಲ್ಮಣ್ಣ ಎಂ.ಇ.ಎ ಇಂಜಿನಿಯರಿಂಗ್ ಕಾಲೇಜು, ನೂರಾರು ಅಲ್ ಬಿರ್ರ್ ಪ್ರಿ ಪ್ರೈಮರಿ ಸ್ಕೂಲ್‌ಗಳು ವಿವಿಧೆಡೆಗಳಲ್ಲಿ ಕಾರ್ಯಾಚ‌ರಿಸುತ್ತಿವೆ .

  ಈ ರೀತಿ ಬಾಲ್ಯ ಪ್ರಾಯದಲ್ಲಿ ಧರ್ಮದ ಬಾಲ ಪಾಠಗಳನ್ನು ಅತ್ಯಂತ ವ್ಯವಸ್ಥಿತವಾಗಿ ಕಲಿಸುವ ಯೋಜನೆ ರೂಪಿಸಿದ ಸಮಸ್ತ , ಓತುಪಳ್ಳಿಗಳಲ್ಲಿ ವರ್ಷಗಟ್ಟಲೆ ಜ್ಞಾನಾರ್ಜನೆ ನಡೆಸಿ ಸಮುದಾಯದ ಸೇವಾ ರಂಗಕ್ಕಿಳಿಯುವ ವಿದ್ವಾಂಸ ವಿದ್ಯಾರ್ಥಿಗಳಿಗೆ ಪದವಿ ನೀಡುವ ಸಲುವಾಗಿ ಪಟ್ಟಿಕ್ಕಾಡ್ ಜಾಮಿಅಃ ನೂರಿಯಾ ಅರಬಿಯಾ ಎಂಬ ಅರಬಿಕ್ ಕಾಲೇಜನ್ನು ಸ್ಥಾಪಿಸಿತು. ಮುಂದೆ ಕಡಮೇರಿ ರಹ್ಮಾನಿಯಾ ಮತ್ತು ಪೊಟ್ಟಚ್ಚಿರ ಅನ್ವರಿಯಾಗಳ ಮೂಲಕ ಧಾರ್ಮಿಕ ಲೌಕಿಕ ಶಿಕ್ಷಣಕ್ಕೆ ಸಮನ್ವಯ ಶಿಕ್ಷಣಕ್ಕೆ ಸಮಸ್ತ ನಾಂದಿ ಹಾಡಿತು. ಅದರ ಮೂರ್ತ ಉದಾಹರಣೆಯಾಗಿದೆ ಚೆಮ್ಮಾಡ್ ದಾರುಲ್ ಹುದಾ ಇಸ್ಲಾಮಿಕ್ ಯೂನಿವರ್ಸಿಟಿ. ದಾರುಲ್ ಹುದಾ ಮತ್ತು ಅದರ ಸಹ ಸಂಸ್ಥೆಗಳು ಭಾರತದ ಮುಸ್ಲಿಂ ಶೈಕ್ಷಣಿಕರಂಗಕ್ಕೆ ನೀಡಿದ ಸೇವೆ ನಿಸ್ತುಲ್ಯವಾದದು . ನಂತರ ಹಲವಾರು ಐತಿಹಾಸಿಕ ಹೆಜ್ಜೆಗಳು ಸಮಸ್ತದ ಶೈಕ್ಷಣಿಕ ಸೇವಾ ರಂಗದಲ್ಲಿ ಮೂಡಿದವು .  ಆ ಪದ್ಧತಿಯನ್ನು ಇನ್ನಷ್ಟು ವಿಸ್ತೃತಗೊಳಿಸುವ ಸಲುವಾಗಿ ಸಮಸ್ತ ನ್ಯಾಷನಲ್ ಎಜುಕೇಶನ್ ಕೌನ್ಸಿಲ್ (SNEC) ಎಂಬ ಹೆಸರಿನಲ್ಲಿ ಆರಂಭಿಸಲಾದ ಹೊಸ ಶೈಕ್ಷಣಿಕ ಪದ್ಧತಿಯು ಇಂದು ಸುವ್ಯವಸ್ಥಿತವಾಗಿ ಬೆಳೆದು ಬರುತ್ತಿದೆ .  ದಕ್ಷಿಣ ಭಾರತವನ್ನು ಮೀರಿ ರಾಷ್ಟ್ರಮಟ್ಟದಲ್ಲಿ ಧಾರ್ಮಿಕ ಲೌಕಿಕ ಸಮನ್ವಯ ಶಿಕ್ಷಣಕ್ಕೆ ಹೊಸ ರೂಪಭಾವವನ್ನು ನೀಡುವ ಯೋಜನೆಯಾಗಿದೆ SNEC . ತಮಿಳುನಾಡಿನ ಪರಂಗಿಪೇಟೆ ಮತ್ತು ದಕ್ಷಿಣ ಕರ್ನಾಟಕದಲ್ಲಿ ಅದರ ಸಂಸ್ಥೆಗಳಿಗೆ ಸಮಸ್ತ ನೇರವಾಗಿ ನೇತೃತ್ವ ನೀಡುತ್ತಿದೆ .
ಜಾಮಿಅಃ ಜೂನಿಯರ್ ಕಾಲೇಜುಗಳು , ಹಿಫ್‌ಳ್ ಕಾಲೇಜುಗಳು , ಫಾಳಿಲಾ ಫಳೀಲಾ ಮಹಿಳಾ ಶರೀಅತ್ ಕಾಲೇಜುಗಳು, ಉತ್ತರ ಭಾರತದಲ್ಲಿರುವ ಎರಡು ಸಾವಿರದಷ್ಟು ಮಕ್ತಬಗಳು , ವಿವಿಧ ಉಪಸಮಿತಿಗಳ ಮೂಲಕ ದೇಶ ವಿದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಹಲವಾರು ಶೈಕ್ಷಣಿಕ ಸಂಸ್ಥೆಗಳು ಇವೆಲ್ಲವೂ ಸಮಸ್ತ ಸಾಧ್ಯವಾಗಿಸಿದ ಧಾರ್ಮಿಕ ಶಿಕ್ಷಣ ಕ್ರಾಂತಿಯಾಗಿದೆ . ಇದೆಲ್ಲದರ ಜೊತೆಗೆ ಪಾರಂಪರಿಕದಾರ್ಮಿಕ ಶಿಕ್ಷಣ ಪದ್ಧತಿಯಾದ ಪಳ್ಳಿ ದರ್ಸುಗಳನ್ನು ನೆಲೆ ನಿಲ್ಲಿಸಲು ವಿಶೇಷ ಯೋಜನೆಗಳನ್ನು ರೂಪಿಸಿ ಗತಕಾಲದ ಚೈತನ್ಯವನ್ನು ಕಾಪಾಡುವ ನಿಟ್ಟಿನಲ್ಲಿಯೂ ಪ್ರಯತ್ನಿಸುತ್ತಿದೆ .

ಒಟ್ಟಿನಲ್ಲಿ ಕಳೆದ ನೂರು ವರ್ಷಗಳಿಂದ ಈ ಸಮುದಾಯದ ಏಕದೈವ ವಿಶ್ವಾಸ ಮತ್ತು ನೈಜ ಆಚರಣೆಗಳಿಗೆ ಸಂರಕ್ಷಣೆ ಒದಗಿಸುವುದರ ಜೊತೆಗೆ ಇಸ್ಲಾಮಿನ ಜೀವನಾಡಿಯಾದ ಅರಿವನ್ನು ಸಮಾಜದ ಪ್ರತಿಯೊಬ್ಬರಿಗೂ ಪ್ರಾಯೋಗಿಕವಾಗಿ ತಲುಪಿಸುವಲ್ಲಿ ಸಮಸ್ತ ಯಶಸ್ವಿಯಾಗಿದೆ.
ಬರಹ: Naeem Faizy

Related Posts

Leave A Comment

Voting Poll

Get Newsletter